ಹೀಗೂ ಉಂಟು! ಎಂಬ ಈ ಕಾರ್ಯಕ್ರಮದಿಂದಾಗಿ ಯಾವುದೋ ಕಾಡಿನ ಮೂಲೆಯಲ್ಲಿ ಗಾಂಜಾ ಸೇದುತ್ತಾ ತಮ್ಮ ಪಾಡಿಗೆ ತಾವು ಬಿದ್ದುಕೊಂಡಿರುತ್ತಿದ್ದ ಸಾಧು ಸಂತರೆಲ್ಲಾ ಇದ್ದಕ್ಕಿದ್ದಂತೆ ಮಹಾತ್ಮರಾಗಿ ಹೋಗಿದ್ದಾರೆ. ಅವರಿಗೇ ಅರಿವಿಲ್ಲದಂತೆ ಅವರು ಅರಿ ಭಯಂಕರರಾಗಿ, ಕ್ಷಣಕಾಲ ಜಗತ್ ಪ್ರಸಿದ್ಧಿಯಾಗಿ, ನಂತರ ಮತ್ತೆ ಅದೇ ಗಾಂಜಾ ಸೇವಿಸುತ್ತಾ ತಾವು ಜಗತ್ ಪ್ರಸಿದ್ಧಿಯಾದುದನ್ನು ನೆನೆಸಿಕೊಳ್ಳುತ್ತಾ ಆನಂದ ಅನುಭವಿಸಿಕೊಂಡು ತಮ್ಮ ಪಾಡಿಗೆ ತಾವಿರುತ್ತಾರೆ. ಅವರ ಹೆಸರಲ್ಲಿ ಮತ್ಯಾವನೋ ಒಂದಷ್ಟು ಕಾಸು ಗಳಿಸಿಕೊಳ್ಳುತ್ತಾನೆ. ನಮ್ಮ ಆಯಾಮದ ಓದುಗರಿಗಾಗಿ ಆ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿಯನ್ನು ವಿವರಿಸಲಿದ್ದೇವೆ. ಅದಕ್ಕೆ ನೀವೇನಾದರೂ ಹೆದರಿಕೊಂಡರೆ ನಾವು ಹೊಣೆಗಾರರಲ್ಲವೆಂದು ಈಗಲೇ ಹೇಳಿಬಿಡುತ್ತೇವೆ...
ಈ ಎಪಿಸೋಡಿನ ಮೊದಲ ಹಂತವಾಗಿ ಒಂದು ಮುಖ್ಯವಾದ ವಿಷಯವನ್ನು ನಾವು ನಿಮಗೆ ಸ್ಪಷ್ಟಪಡಿಸುತ್ತೇವೆ. ಈ ’ಹೀಗೂ ಉಂಟು’ ಕಾರ್ಯಕ್ರಮವನ್ನು ಮಾಡಲಿಕ್ಕೆ ಸಹಾಯವಾಗುವಂತೆ ಕರ್ನಾಟಕದಾದ್ಯಂತ ಹಲವಾರು ಏಜೆಂಟುಗಳಿದ್ದಾರೆ. ಆ ಏಜೆಂಟರು ತಲೆಮಾಸಿದ, ನಾಮ ಬಳಿದುಕೊಂಡ ಅಥವಾ ಗಂಟೆ ಹೊಡೆಯುವ ಯಾವನನ್ನಾದರೂ ಹಿಡಿದು ವ್ಯಾಪಾರ ಕುದುರಿಸುತ್ತಾರೆ. ಟಿವಿಯಲ್ಲಿ ನಿನಗೆ ಭರ್ಜರಿ ಪ್ರಚಾರ ಕೊಡಿಸುವುದಾಗಿಯೂ ಅದರಿಂದ ನಿನ್ನ ವ್ಯಾಪಾರ ಸಮೃದ್ದಿಯಾಗುವುದೆಂದೂ ಅವನಿಗೆ ನಂಬಿಸಿ ಅವನಿಂದ ಇಷ್ಟೆಂದು ಮೊತ್ತವನ್ನು ಪಡೆದುಕೊಂಡು, ಅದರಲ್ಲಿ ತಮ್ಮ ಕಮೀಷನ್ ಮುರಿದುಕೊಂಡು ಉಳಿದುದನ್ನು ಹೀಗೂ ಉಂಟು ಕಾರ್ಯಕ್ರಮದ ರೂವಾರಿಗೆ ತಲುಪಿಸುತ್ತಾರೆ. ಆತ ಮಧ್ಯರಾತ್ರಿಯಲ್ಲಿ ಕೂತು ಸ್ಕ್ರಿಪ್ಟ್ ಬರೆದು ಅದೆಲ್ಲೋ ನಿಂಬೆಹಣ್ಣು ಮಂತ್ರಿಸಿಕೊಟ್ಟು ಜನರಿಂದ ಪುಡಿಗಾಸು ಪಡೆದು ಜೀವನ ನಡೆಸುತ್ತಿರುವವನನ್ನು ತನ್ನ ಚಿತ್ರಕಥೆಯ ಮೂಲಕ ಮಹಾನ್ ಪವಾಡ ಪುರುಷನನ್ನಾಗಿ ಪರಿವರ್ತಿಸಿಬಿಡುತ್ತಾನೆ.
ಸ್ಥಳ: ಮಂಡ್ಯ ಜಿಲ್ಲೆಯ ಪಾಂಡವಪುರ
ಪಾಂಡವಪುರದಲ್ಲಿ ಒಬ್ಬ ಬಡ ಫಕೀರ ಇದ್ದ. ಆ ಫ಼ಕೀರನ ಬಳಿಗೆ ಸುತ್ತಮುತ್ತಲಿನ ಮುಗ್ಧ ಹಳ್ಳಿಗರು ಹೋಗಿ ತಮ್ಮ ತೊಂದರೆ ಪರಿಹರಿಸಿಕೊಳ್ಳಲು ಆತನಿಂದ ನಿಂಬೆಹಣ್ಣು ಮಂತ್ರಿಸಿಕೊಂಡು ಅವನಿಗೆ ಐದೋ ಹತ್ತೋ ರುಪಾಯಿ ಕೊಟ್ಟು ಬರುತ್ತಿದ್ದರು. ಈ ದಾಡಿಬಿಟ್ಟ ಸಾಬಣ್ಣ ಹಿಂದೂಗಳಿಗೆ ಹಿಂದೂ ದೇವರ ಹೆಸರಿನಲ್ಲಿಯೂ, ಮುಸ್ಲಿಮರಿಗೆ ಮುಸ್ಲಿಮ್ ದೇವರ ಹೆಸರಿನಲ್ಲಿಯೂ ನಿಂಬೆಹಣ್ಣು ಮಂತ್ರಿಸಿಕೊಟ್ಟು ಪುಡಿಗಾಸು ಪಡೆದು ಅದರಲ್ಲಿಯೇ ಗಾಂಜಾ ಸೇದಿಕೊಂಡು ತನ್ನ ಪಾಡಿಗೆ ತಾನಿದ್ದವ. ಅವನನ್ನು ಕಂಡ ಒಬ್ಬ ಏಜೆಂಟನಿಗೆ ಇವನನ್ನು ಹಿಡಿದು ತಾನ್ಯಾಕೆ ಒಂದಷ್ಟು ಹಣ ಸಂಪಾದನೆ ಮಾಡಬಾರದೆಂಬ ಯೋಚನೆ ಬಂದು ತಡಮಾಡದೇ ಆ ಗಡ್ಡಧಾರಿ ಸಾಬಣ್ಣ ವಾಸಿಸುತ್ತಿದ್ದ ಗುಡಿಸಿಲಿನತ್ತ ಹೋಗಿ ವ್ಯವಹಾರ ಕುದುರಿಸತೊಡಗಿದ.
ಆ ಸಾಬಣ್ಣ ಅದೇ ತಾನೇ ಗಾಂಜಾ ಏರಿಸಿಕೊಂಡು ಮತ್ತಿನಲ್ಲಿ ಇವತ್ಯಾರೂ ಗಿರಾಕಿಗಳು ಬರಲಿಲ್ಲವೆಂದು ಯೊಚಿಸುತ್ತಾ ಕೂತಿದ್ದಾಗಲೇ ಹೀಗೂ ಉಂಟು ಕಾರ್ಯಕ್ರಮದ ಏಜೆಂಟ್ ಅಲ್ಲಿ ಪ್ರತ್ಯಕ್ಷನಾದ. ಠಾಕು ಠೀಕಾದ ಅವರನ್ನು ಕಂಡ ಫ಼ಕೀರ ಯಾರೋ ಎಲ್ಲಿಯದೋ ಅಡ್ರಸ್ ಕೇಳಿಕೊಂಡು ಬಂದಿರಬಹುದೆಂದು ತಿಳಿದು ’ಕ್ಯಾ ಸಾಬ್ ಕ್ಯಾ ಹೋನಾ’, ಎಂದ. ಬಗ್ಗಿಕೊಂಡು ಗುಡಿಸಲೊಳಕ್ಕೆ ಬಂದ ಏಜೆಂಟ್ ’ನೋಡಿ ಸಾಬಣ್ಣ, ನಿಮಗೀಗ ಒಳ್ಳೆ ಅದೃಷ್ಟ ಬಂದಿದೆ, ನಾವು ಟೀವಿಯವರು. ನಿಮ್ಮ ಬಗ್ಗೆ ನಾವು ಟೀವಿಯಲ್ಲಿ ತೋರಿಸುತ್ತೇವೆ, ನಿಮ್ಮನ್ನು ಹುಡುಕಿಕೊಂಡು ಬಂದಿದ್ದೇವೆ’ ಅಂದ. ಕೂಡಲೇ ಛಂಗನೇ ಎದ್ದು ನಿಂತ ಸಾಬಣ್ಣ ತಾನು ದೇವರ ಏಜೆಂಟ್ ಎಂಬುದನ್ನೂ ಮರೆತು ಈ ಟೀವಿ ಏಜೆಂಟನಿಗೆ ತಲೆಬಾಗಿ ವಂದಿಸಿದವನೇ ’ಅಚ್ಚಾ ಸಾಮೀ, ಬಹುತ್ ಅಚ್ಚಾ, ನೀವು ದೇವರ ರೂಪದಲ್ಲಿಯೇ ಇಲ್ಲಿಗೆ ಬಂದಿದ್ದೀರಿ, ಎಲ್ಲಿ ನಿಮ್ಮ ಬಳಿ ಕ್ಯಾಮರಾನೇ ಇಲ್ಲವಲ್ಲಾ’ ಎಂದು ಅವನ ಸುತ್ತ ಮುತ್ತ ಹುಡುಕಾಡಿದ. ಮೊದಲು ಮಾತಾಡಿ ವ್ಯವಹಾರ ಕುದುರಿಸಿಕೊಳ್ಳಲು ಹೋಗಿದ್ದ ಏಜೆಂಟ್ ’ಹಂಗಲ್ಲಾ ಸಾಬಣ್ಣ, ಮೊದಲು ನಾನು ಹೇಳುವುದನ್ನು ಕೇಳು...ನಿನ್ನನ್ನು ಟೀವಿಯಲ್ಲಿ ತೋರಿಸುವ ಕಾರ್ಯಕ್ರಮ ಮಾಡುವುದಕ್ಕೆ ನಮಗೆ ಇಷ್ಟು ಖರ್ಚಾಗುತ್ತದೆ. ಅದಕ್ಕೆ ನೀನೂ ಹಣವನ್ನು ಕೊಡಬೇಕಾಗುತ್ತದೆ’ ಎಂದು ಕಾರ್ಯಕ್ರಮಕ್ಕಾಗುವ ಖರ್ಚಿನ ಮೊತ್ತವನ್ನು ತಿಳಿಸಿ ಆ ಸಾಬಣ್ಣ ಕೊಡಬೇಕಾಗಿರುವ ಮೊತ್ತವನ್ನೂ ಹೇಳಿದ.
ಆತ ಹೇಳಿದ ಮೊತ್ತವನ್ನು ಕೇಳಿದ ಕೂಡಲೇ ಹೌಹಾರಿದ ಫ಼ಕೀರ ಸಾಬಣ್ಣ ’ಅಲ್ಲಾ ಸಾಮಿ, ನಾನೇ ಫ಼ಕೀರ, ನನ್ನ ಜೀವನದಲ್ಲಿಯೇ ಅಷ್ಟೊಂದು ಹಣವನ್ನು ಕಂಡಿಲ್ಲ, ಏನೋ ಅದೂ ಇದೂ ಕಷ್ಟ ಅಂತ ಬಂದ ಜನರಿಗೆ ನಾನು ನಿಂಬೆ ಹಣ್ಣು ಮಂತ್ರಿಸಿಕೊಟ್ಟು ಅವರು ಕೊಡುವ ಪುಡಿಗಾಸಲ್ಲಿ ನನ್ನ ಜೀವನ ಚಲ್ತಾಹೆ, ನಾನೆಲ್ಲಿ ನಿಮಗೆ ಸಾವಿರಗಟ್ಟಲೇ ಹಣ ಕೊಡಲಿ, ನೀವಾಗೇ ಬಂದ್ಬುಟ್ಟೂ ಈಗ...ನಿಮ್ದು ಟೀವಿ ಸಾವಾಸನೇ ಬೇಡ ಹೋಗೀ,’ ಅಂದು ನಿರ್ದಾಕ್ಷಿಣ್ಯವಾಗಿ ಹೇಳಿದವನೇ ಭುಸು ಭುಸು ಎಂದು ಭಂಗಿ ಎಳೆಯತೊಡಗಿದ. ಈ ವಾರವೇ ಹೀಗೂ ಉಂಟು ಕಾರ್ಯಕ್ರಮಕ್ಕೆ ಹೊಸ ಗಿರಾಕಿಯನ್ನು ಹುಡುಕಲೇಬೇಕೆಂದು ಕಾರ್ಯಕ್ರಮದ ನಿರ್ವಾಹಕ ತಾಕೀತು ಮಾಡಿದ್ದರಿಂದ ಏಜೆಂಟನಿಗೆ ಈ ಸಾಬಿಯನ್ನು ಬಿಟ್ಟರೆ ತನಗೇ ನಷ್ಟವೆಂದು ಚಿಂತಿಸಿದವನೇ ಹೇಗಾದರೂ ತಾನೇ ಬಂಡವಾಳ ಹಾಕಿಯಾದರೂ ಈ ಸಾಬಣ್ಣನ ಬಗ್ಗೆ ಕಾರ್ಯಕ್ರಮ ಮಾಡಿ ನಂತರ ಅವನಲ್ಲಿಗೆ ಬರುವ ಜನಜಂಗುಳಿಯಿಂದ ತಾನೇ ಹಣ ವಸೂಲಿಗೆ ಇಳಿದರಾಯಿತೆಂದು ನಿರ್ಧರಿಸಿ,
ಆ ಫ಼ಕೀರನಿಗೆ ’ನೋಡು ಸಾಬಣ್ಣಾ...ನೀನು ಸುಮ್ಮನೆ ನಾವು ಹೇಳಿಕೊಟ್ಟ ಹಾಗೆ ಹೇಳಬೇಕಷ್ಟೇ, ನಮ್ಮ ಕಾರ್ಯಕ್ರಮಕ್ಕೆ ಖರ್ಚಾಗುವ ಹಣವನ್ನು ನಾನೇ ಹಾಕುತ್ತೇನೆ. ಅದರಿಂದ ನೀನು ಫೇಮಸ್ ಆಗುತ್ತೀಯ. ಆಗ ನಿನ್ನಲ್ಲಿಗೆ ಬರುವ ಜನರಿಂದ ಹೇಗೆ ಹಣ ವಸೂಲಿ ಮಾಡಬಹುದೆಂದು ನಾನು ಹೇಳಿಕೊಡುತ್ತೇನೆ. ಬರುವ ಹಣದಲ್ಲಿ ಮೊದಲು ನಾನು ನನ್ನ ಪಾಲಿನದ್ದನ್ನು ತೆಗೆದುಕೊಳ್ಳುತ್ತೇನೆ. ನಂತರ ಉಳಿದ ಹಣವೆಲ್ಲಾ ನಿನ್ನದೇ’, ಅಂದ. ಮೈಗಳ್ಳನಾಗಿ, ಸೋಮಾರಿಯಾಗಿ ಬದುಕುವುದನ್ನು ರೂಡಿಸಿಕೊಂಡಿದ್ದ ಸಾಬಣ್ಣನಿಗೆ ತನ್ನ ಮುಂದೆ ಹಣದ ರಾಶಿಯೇ ಬಂದು ಬಿದ್ದಂತಾಗಿ ತಾನೇ ತನ್ನಲ್ಲಿಗೆ ಬರುವವರಿಗೆ ದೇವರಿಂದ ಪರಿಹಾರ ಕೊಡಿಸುವುದನ್ನೂ ಮರೆತು ಕೂಡಲೇ ಏಜೆಂಟನ ಕಾಲಿಗೆ ಬಿದ್ದುಬಿಟ್ಟು...’ಸಾಮೀ ನೀವೇ ದೇವರ ರೂಪದಲ್ಲಿ ಬಂದಿದ್ದೀರಿ, ನನ್ನನ್ನು ನೀವೇ ಉದ್ದಾರ ಮಾಡಬೇಕು’ ಎಂದು ದೈನ್ಯನಾಗಿ ಬೇಡಿದ.
ಪರವಾಗಿಲ್ಲ! ಈತ ನಾನು ಹೇಳಿದಂಗೆ ಕೇಳುವಂತಿದ್ದಾನೆ, ಇವನನ್ನು ಹಿಡಿದುಕೊಂಡು ತಾನೂ ಒಂದಷ್ಟು ಕಾಸು ಮಾಡಬಹುದೆಂಬ ಭರವಸೆ ಮೂಡಿದ್ದೇ ತಡ ಏಜೆಂಟ್ ಅವನನ್ನು ಕರೆದುಕೊಂಡು ಗುಡಿಸಲಿನಿಂದ ಹೊರಗೆ ಬಂದವ ದೂರದಲ್ಲಿ ಕಾಣಿಸುತ್ತಿದ್ದ ಹೆಂಡದಂಗಡಿಯತ್ತ ಹೊರಟ. ಅಲ್ಲಾಗಲೇ ಜನಜಂಗುಳಿ ಸೇರಿತ್ತು. ಅಲ್ಲಿಯ ಜನಕ್ಕೆ ಸಾಬಣ್ಣ ದಿನನಿತ್ಯ ಬಂದು ಹೆಂಡ ಕುಡಿದುಹೋಗುವುದು ಮಾಮೂಲಿ ಎನಿಸಿತ್ತಾದರೂ ಇಂದು ಆ ಸಾಬಣ್ಣನ ಜತೆಗೆ ಠಾಕು ಠೀಕಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದವನನ್ನು ಕಂಡು ಆಶ್ಚರ್ಯವಾಗಿತ್ತು. ಆ ಹೆಂಡದಂಗಡಿಯಲ್ಲಿ ಸಾಬಣ್ಣನಿಗೆ ಒಂದು ಬಾಟಲ್ ಲೋಕಲ್ ಹೆಂಡವನ್ನು ಕೊಡಿಸಿದ ಟಿವಿ ಏಜೆಂಟ್ ಜನರೆದುರಿಗೆ ವ್ಯವಹಾರ ಮಾತಾಡಿದರೆ ಕೆಲಸ ಕೆಡುವುದೆಂದು ಆತನನ್ನು ದೂರಕ್ಕೆ ಕರೆದುಕೊಂಡು ಹೋದ. ಈ ಹೋತನ ಗಡ್ಡದ ಸಾಬಿ ಫ಼ಕೀರನನ್ನು ಯಾವ ರೀತಿ ಬಿಂಬಿಸಿದರೆ ತನ್ನ ಪ್ರೋಗ್ರಾಂ ಸಫ಼ಲವಾಗಬಹುದೆಂದು ಅವನ ಮೆದುಳು ಪ್ಲಾನ್ ಹಾಕುತ್ತಿತ್ತು.
’ನೋಡು ಸಾಬಣ್ಣ, ಇದು ಸಾವಿರಾರು ರೂಪಾಯಿಗಳ ಖರ್ಚಿನ ಕಾರ್ಯಕ್ರಮ. ಅದಕ್ಕೆ ನಾನೂ ಬಂಡವಾಳ ಹಾಕಬೇಕಿದೆ. ಈ ಕಾರ್ಯಕ್ರಮದಿಂದ ಹೆಚ್ಚಿಗೆ ಅನುಕೂಲವಾಗುವುದು ನಿನಗೇ. ಆದರೆ ಅದಕ್ಕಾಗಿ ನಾನು ಹೇಳಿಕೊಟ್ಟಂತೆ ನೀನು ನಡೆದುಕೊಳ್ಳಬೇಕು. ನೀನು ಸಾಕಷ್ಟು ಹಣ ಸಂಪಾದನೆ ಮಾಡಿ ಕಾರಿನಲ್ಲೇ ಓಡಾಡಬಹುದು ಗೊತ್ತಾ! ನೀನು ಒಂದೆರಡು ದಿನ ನನ್ನ ಜತೆಯಲ್ಲೇ ಇರಬೇಕು. ನಮ್ಮ ಕಾರ್ಯಕ್ರಮ ನಿರ್ದೇಶಕರು ನಿನಗೆ ಟಿವಿಯಲ್ಲಿ ಏನೇನು ಆಕ್ಷನ್ ಮಾಡಬೇಕು, ಹೇಗೆ ಮಾತಾಡಬೇಕೆಂಬುದನ್ನು ಹೇಳಿಕೊಡುತ್ತಾರೆ. ಅವರ ದಯೆಯಿಂದಾಗಿ ಮೂಲೆಯಲ್ಲಿ ಬಿದ್ದಿದ್ದ ನಿನ್ನಂತ ಅದೆಷ್ಟೋ ಮಂದಿ ಇವತ್ತು ಲಕ್ಷ ಲಕ್ಷ ದುಡ್ಡಿಟ್ಟುಕೊಂಡಿದ್ದಾರೆ. ಕಾರ್ಯಕ್ರಮದ ಖರ್ಚನ್ನೆಲ್ಲಾ ನನಗೆ ಬಿಡು. ಈ ಕಾರ್ಯಕ್ರಮದಿಂದ ನೀನು ಸಿಕ್ಕಾಪಟ್ಟೆ ಪ್ರಸಿದ್ದಿಯಾಗುವುದರಿಂದ ಜನರು ಲಕ್ಷಾಂತರ ಸಂಖ್ಯೆಯಲ್ಲಿ ನಿನ್ನ ಬಳಿಗೆ ಬರುತ್ತಾರೆ. ಆಗ ಅವರಿಂದ ನೀನು ವಸೂಲಿ ಮಾಡುವ ಕಾಸಲ್ಲಿ ಅರ್ಧ ನನಗೆ ಸೇರಬೇಕು, ಕಂಡಿಷನ್ ಒಪ್ಪಿಗೇನಾ?’ ಎಂದ. ಆಗಲೇ ಗಾಂಜಾ ಸೇದಿ ಅದರೊಟ್ಟಿಗೆ ಹೆಂಡವನ್ನೂ ಏರಿಸಿದ್ದರಿಂದ ಅಮಲಿನಲ್ಲಿ ತೂರಾಡತೊಡಗಿದ ಸಾಬಣ್ಣ ’ಸಾಮಿ, ಅಂಗೆ ಮಾಡ್ಬುಡೀ...ನಿಮ್ದು ಮಾತು ನಾನು ಮೀರಲ್ಲ, ಅದೇನು ಮಾಡ್ತೀರೋ ಮಾಡಿ, ನೀವು ಏನು ಹೇಳಿಕೊಡ್ತೀರೋ ಹಂಗೇ ನಾ ಮಾಡ್ತೀನಿ...ನಿಮ್ಮ ಮಾತು ಮೀರಾಕಿಲ್ಲ’ ಅಂದ.
ಕಡೆಗೂ ವ್ಯವಹಾರ ಕುದುರಿಸಿಕೊಂಡ ಹೀಗೂ ಉಂಟು ಕಾರ್ಯಕ್ರಮದ ಏಜೆಂಟ್, ಕಾರ್ಯಕ್ರಮದ ನಿರೂಪಕ, ನಿರ್ಮಾಪಕನಾಗಿದ್ದವನಿಗೆ ಕೂಡಲೇ ಫೋನ್ ಮಾಡಿ ’ಗುರುಗಳೇ, ಒಬ್ಬ ಅಪರೂಪದ ಪವಾಡ ಪುರುಷರೊಬ್ಬರನ್ನು ಹುಡುಕಿದ್ದೀನಿ, ಅವರದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ, ಅವರು ಹಿಂದೂಗಳಿಗೆ ಹಿಂದೂ ದೇವತೆಗಳ ಹೆಸರಲ್ಲಿಯೂ, ಮುಸ್ಲಿಮರಿಗೆ ಅವರ ದೇವರ ಹೆಸರಿನಲ್ಲಿಯೂ ಮಂತ್ರಿಸಿ ಕೊಡುತ್ತಾರೆ. ಸುತ್ತಮುತ್ತಲಿನ ನೂರಾರು ಹಳ್ಳಿಗಳಲ್ಲಿ ಅವರು ಪವಾಡ ಪುರುಷರೆನಿಸಿಕೊಂಡಿದ್ದಾರೆ. ಅವರ ಬಗ್ಗೆ ಕಾರ್ಯಕ್ರಮ ಮಾಡಿಬಿಡೋಣ’ ಅಂದ. ಸಖತ್ ಖುಶಿಯಾದ ಕಾರ್ಯಕ್ರಮ ನಿರ್ಮಾಪಕ ’ಗುಡ್, ವೆರಿಗುಡ್, ಯಾರಾತ? ನಮ್ಮ ಕಾರ್ಯಕ್ರಮದ ರೂಲ್ಸ್ ಅವನಿಗೆ ಹೇಳಿದ್ದೀಯಾ, ಎಷ್ಟಕ್ಕೆ ಡೀಲ್ ಕುದುರಿಸಿದ್ದೀಯಾ?’ ಎಂದ. ಡೀಲ್ ಕುದುರಿಲ್ಲವೆಂದು ಹೇಳಿದರೆ ಇನ್ನೆಲ್ಲಿ ಈ ಕಾರ್ಯಕ್ರಮ ಕ್ಯಾನ್ಸಲ್ ಆಗುತ್ತದೋ ಎಂದು ಆತಂಕಕ್ಕೊಳಗಾದ ಏಜೆಂಟ್ ’ಎಲ್ಲಾ ಆಗಿದೆ ಗುರುವೇ, ನೀವು ಇಲ್ಲಿಗೆ ಬಂದಾಗ ನಾನು ಕೂತು ವಿವರವಾಗಿ ಎಲ್ಲಾ ಹೇಳುತ್ತೇನೆ’ ಅಂದ. ಆ ನಿರ್ಮಾಪಕ ಕಮ್ ನಿರ್ದೇಶಕ ’ಅದಿರ್ಲೀ, ಮೊದಲು ಕ್ಯಾಮರಾದವನಿಗೆ, ಬಾಡಿಗೆ ಟಾಕ್ಸಿಗೆ ಎಲ್ಲಾ ಅಡ್ವಾನ್ಸ್ ಕೊಡಬೇಕಿದೆ. ನೀನು ಕೂಡಲೇ ಹಣ ತಗಂಡು ಬಂದು ಬಿಡು’ ಅಂದ. ’ಓಕೆ ಗುರುಗಳೇ ಓಕೆ’ ಎಂದ ಏಜೆಂಟ್ ಸಾಬಣ್ಣನತ್ತ ತಿರುಗಿ ’ಯೋ ಸಾಬಣ್ಣ ನಿನ್ನ ಭಾಗ್ಯದ ಬಾಗಿಲು ಇದೀಗ ತಾನೇ ತೆರೆಯಿತು. ನೀನು ಸ್ನಾನ ಮಾಡಿ ಒಳ್ಳೆ ಬಟ್ಟೆ ಹಾಕಿಕೊಂಡು ರೆಡಿಯಾಗಿರು’ ಅಂದ.
ಸ್ನಾನ ಮಾಡಿ, ಬಟ್ಟೆ ಬದಲಿಸಿ ಎಷ್ಟು ವಾರಗಳಾಗಿತ್ತೆಂಬುದನ್ನೇ ಮರೆತಿದ್ದ ಆ ಫ಼ಕೀರ ’ಸಾಮೀ, ನನ್ನತ್ರ ಇರುವುದು ಇದೊಂದೇ ಬಟ್ಟೆ ಇದನ್ನೇ ಒಗೆದು ಹಾಕಿಕೊಳ್ಳಬೇಕು’ ಅಂದ. ಆತನು ಹಾಕಿದ್ದ ಬಟ್ಟೆಯನ್ನೊಮ್ಮೆ ದೄಷ್ಟಿಸಿದ ಏಜೆಂಟ್ ಆ ಬಟ್ಟೆಯನ್ನು ಉಟ್ಟಾಗಿನಿಂದ ಒಗೆಯದೇ ಅದರ ಬಣ್ಣ ಮಾಸಿ ಅಲ್ಲಲ್ಲಿ ಹರಿದಿದ್ದುದನ್ನು ಗಮನಿಸಿ, ಅದನ್ನು ಈಗ ಒಗೆದಲ್ಲಿ ಅದು ಹತ್ತಾರು ತೂತಾಗುವ ಸಾಧ್ಯತೆಯಿದ್ದುದರಿಂದ ’ನೋಡಯ್ಯಾ, ನಾನು ದುಡ್ಡು ಕೊಡ್ತೀನಿ, ಹೋಗಿ ಹೊಸ ಪಂಚೆ, ಜುಬ್ಬಾ ತಗೋ’ ಎಂದು ಅವನಿಗೆ ಬಟ್ಟೆಗೆಂದು ಅಡ್ವಾನ್ಸ್ ಕೊಟ್ಟು ನಿರ್ಮಾಪಕನಿಗೆ ಅಡ್ವಾನ್ಸ್ ಕೊಡಲು ಹೊರಟ. ದುಡ್ಡು ಪಡೆದ ಹೋತನಗಡ್ಡದ ಸಾಬಣ್ಣ ಆ ಏಜೆಂಟ್ ಮರೆಯಾದ ಮೇಲೆ ಅದೇ ಖುಷಿಯಲ್ಲಿ ಮತ್ತೊಂದು ಬಾಟಲ್ ಹೆಂಡ ಏರಿಸಿ ಹೊಸ ಬಟ್ಟೆ ತರಲು ಹೊರಟ.
ಹೀಗೆ ವ್ಯವಹಾರ ಕುದುರಿಸಿಕೊಂಡ ಏಜೆಂಟ್, ನಿರ್ಮಾಪಕನಲ್ಲಿಗೆ ಹೋಗಿ ಮಾತನಾಡಿದ್ದನ್ನೂ, ಆ ಭಯೋತ್ಪಾದಕನಂತಿದ್ದ ನಿರೂಪಕ ಕಂ ನಿರ್ಮಾಪಕ ಆ ಕಾರ್ಯಕ್ರಮವನ್ನು ಯಾವ ರೀತಿ ನಡೆಸಿಕೊಟ್ಟನೆಂಬುದನ್ನೂ, ನಂತರ ಆ ಕಾರ್ಯಕ್ರಮದಿಂದ ಹೋತನಗಡ್ಡದ ಫಕೀರ ಅನುಭವಿಸಿದ ತಾಪತ್ರಯಗಳನ್ನೂ ಮುಂದಿನ ಸಂಚಿಕೆಯಲ್ಲಿ ನಿಮ್ಮ ಮುಂದಿಡುತ್ತೇವೆ. ಅಲ್ಲಿಯವರೆಗೆ ಹೆದರದೇ ನೆಮ್ಮದಿಯಾಗಿರಿ ಎಂದು ಹೇಳುತ್ತಾ...