ಕನ್ನಡ ಸೊಗಡಿನ ಹುಡುಕಾಟ (ಹಿ.ಶಿ.ರಾ.)

ಮುಗ್ಗಲಮಕ್ಕಿಯ ಗುಡಿಸಲಿನಿಂದ... (ಬಿ.ಎಸ್. ನಾಗರತ್ನ) 

"ಆ ದಶಕ" -ಬಿಡುಗಡೆಯ ಮಾತು (ದೇವನೂರು)

ಗೀತಕ್ಕನ ಭಗವದ್ಗೀತೆ (ಜಾನಕಿ ಮಂಜುನಾಥಪುರ) 

ಗ್ರಾಮ ಪಂಚಾಯ್ತಿ ಎಲೆಕ್ಷನ್ ಗಳ ’ಆಪರೇಷನ್’ ಗೆ ಸಜ್ಜಾಗಿರುವ ಕಮಲ  

ನಿಮ್ಮೇರಿಯಾ ಕಾರ್ಪೋರೇಟರ್...ಕ್ವಾರ್ಟರ್ ಶಿವ (ಬಿ.ಎಸ್.ಎಸ್.)

ನಮಗೆ ಉಳಿದಿರುವ ಮಲೆನಾಡು (ಎಸ್.ಸಿರಾಜ್ ಅಹಮದ್) 

ಕಾವೇರಿ ನೀರು ಹಂಚಿಕೆ- ಜಗಳಕ್ಕೆ ಪರಿಹಾರವಿದೆಯೇ?-ಬಂಜಗೆರೆ 

ಜಾತ್ಯಾತೀತ ರಾಷ್ಟ್ರದ ಸಮಗ್ರತೆಗೊಂದು ಬೆಳ್ಳಿಕಿರಣ!!

’ಸಹನಾ’ ವಿಶೇಷ ವರದಿ
 

ಅಭಿವೃದ್ದಿ ಶೀಲ ಭಾರತಕ್ಕೆ ಸೆಪ್ಟೆಂಬರ್ ೩೦ ೨೦೧೦ ಐತಿಹಾಸಿಕ ದಿನ! ಶತಮಾನದ ಸಮಸ್ಯೆಯಾದ ಮಸೀದಿಯೋ..ಮಂದಿರವೋ?? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಆರು ದಶಕಗಳಿಂದ ಕಟಕಟೆಯಲ್ಲಿ ನಡೆಯುತ್ತಿದ್ದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಾದ-ವಿವಾದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಮೂಲಕ ತನ್ನ ಸಂವಿಧಾನದ ಘನತೆಯನ್ನು ಎತ್ತಿಹಿಡಿದ ಸಂದರ್ಭವಿದು!
ಸ್ವಾತಂತ್ರ್ಯ ಭಾರತದ ಹುಟ್ಟಿನ ಕೆಲ ಕಾಲದಲ್ಲಿಯೇ, ಇಲ್ಲಿ ಮಂದಿರವೋ ಅಥವಾ ಮಸೀದಿಯೋ ಎಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆರಂಭವಾದ ವ್ಯಾಜ್ಯ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಕಂಟಕಪ್ರಾಯವಾಗಿತ್ತು. ರಾಜಕೀಯ, ಧಾರ್ಮಿಕ ಸಮಸ್ಯೆಯಾಗಿ ತೀವ್ರತೆ ಪಡೆದಿತ್ತು. ಸಮಗ್ರತೆಯಲ್ಲಿ ಐಕ್ಯತೆ ಸಾರುವ ಭಾರತದ ಸಂವಿಧಾನಕ್ಕೆ ಸವಾಲಾಗಿ ಪರಿಗಣಿಸಿದ್ದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ೧೯೯೨ರ ಡಿಸೆಂಬರ್ ೬  ರಂದು ಬಾಬ್ರಿ ಮಸೀದಿ ದ್ವಂಸ ಪ್ರಕರಣದ ನಂತರ ರಾಷ್ಟ್ರದ ತೀವ್ರತರ ರಾಜಕೀಯ ಸಮಸ್ಯೆಯಾಗಿ ಜಟಿಲಗೊಂಡಿತ್ತು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ಇದೊಂದು ಕಪ್ಪುಚುಕ್ಕೆಯಾಗಿ ಭಾರತದ  ಸಂವಿಧಾನಕ್ಕೆ ಅಪಚಾರದ ಪರದೆಯನ್ನು ಹೊದೆಸಿತ್ತು.
 
 
೨.೭ ಎಕರೆ ವಿಸ್ತೀರ್ಣದಲ್ಲಿರುವ ವಿವಾದಿತ ಪ್ರದೇಶದಲ್ಲಿ ೧೯೫೮ ರಲ್ಲಿ ಬಾಬರನ ಮಸೀದಿ ಕಟ್ಟುವ ಮುನ್ನವೇ ಅಲ್ಲೊಂದು ದೇವಾಲಯವಿತ್ತು, ಅದರಲ್ಲೂ ಅದು ರಾಮನ ಜನ್ಮ ಸ್ಥಳವಾಗಿತ್ತೆಂಬ ವಿವಾದ ಹೆಮ್ಮರವಾಗಿ ಬೆಳೆದು ೧೯೯೨ರಲ್ಲಿ ಬಿಜೆಪಿ ಹಾಗೆ ಸಾಧಿಸುವುದನ್ನೇ ತನ್ನ ಪಕ್ಷದ ರಾಜಕೀಯ ಅಜೆಂಡಾ ಮಾಡಿಕೊಂಡಮೇಲೆ, ಈ ವಿವಾದ ಕೇವಲ ಅಯೋಧ್ಯೆಯದ್ದಾಗಿರದೆ ಧಾರ್ಮಿಕ ಸ್ವರೂಪ ಪಡೆದುಕೊಂಡು ದೇಶದುದ್ದಗಲದಲ್ಲೂ ಕಾವೇರಿಸಿತ್ತು. ಅದರಲ್ಲೂ ಬಾಬ್ರಿ ಮಸೀದಿ ಧ್ವಂಸವಾದ ದಿನದಿಂದ ಪರಿಸ್ಥಿತಿ ಅತಿಯಾಗಿ ಬಿಗಡಾಯಿಸಿ, ವಿವಾದ ಹಿಂಸೆ, ಕೋಮು ಗಲಭೆ ದ್ವೇಷಕ್ಕೆ ತಿರುಗಿತ್ತು. ಬಿಜೆಪಿಗಂತೂ ಇದು ಪ್ರತಿ ಚುನಾವಣೆಯ ವೋಟ್ ಬ್ಯಾಂಕ್ ವಿಚಾರವಾಗಿ, ರಾಮ ಜನ್ಮ ಭೂಮಿ ಕಟ್ಟಿ, ಆ ಮೂಲಕ ಹಿಂದೂ ಧರ್ಮದ ಉದ್ಧಾರವೇ ನಮ್ಮ ಪರಮ ಉದ್ದೇಶ ಎನ್ನುವಂತೆ ಪ್ರೊಜೆಕ್ಟ್ ಮಾಡಿಕೊಂಡು ಬಿಟ್ಟಿತ್ತು. ಈ ವಿವಾದವನ್ನು ಹುಟ್ಟಿ ಹಾಕಿ, ಗಲಭೆ ಮಾಡಿಸಿಯೇ ರಾಜಕೀಯ ನೆಲೆ ಕಂಡುಕೊಳ್ಳುವಲ್ಲಿ ಬಿಜೆಪಿ ನಾಯಕರು ಯಶಸ್ವಿ ಆಗಿದ್ದರು. ಇಷ್ಟು ದಿನ ಆತಂಕ ಹುಟ್ಟಿಸಿದ್ದ ಈ ಸೂಕ್ಷ್ಮ ವಿವಾದ ಸುಲಲಿತವಾಗಿ ಬಗೆಹರಿಯುವ ಸಾದ್ಯತೆಗಳಿಲ್ಲ ಅನ್ನುವುದು ಪ್ರತಿಯೊಬ್ಬ ಭಾರತೀಯನ ಅನಿಸಿಕೆಯಾಗಿತ್ತು.
 
 
ಕಳೆದ ಹದಿನೈದು ದಿನಗಳಿಂದ ಅಯೋಧ್ಯೆಯ ತೀರ್ಪಿನ ಬಗ್ಗೆ ರಾಷ್ಟ್ರದಲ್ಲಿ ಚರ್ಚೆ, ಆತಂಕವಿತ್ತು. ಇನ್ನೇನು ತೀರ್ಪು ಹೊರಬಿತ್ತು ಎನ್ನುವಾಗ ಮತ್ತೆ ಸರ್ವೋಚ್ಛ ನ್ಯಾಯಾಲಯದ ತಡೆ. ಮತ್ತಷ್ಟು ದುಗುಡ, ಏನೋ ಕಸಿವಿಸಿ. ರಾಷ್ಟ್ರದೆಲ್ಲೆಡೆ ಕಟ್ಟೆಚ್ಚರದ ಬಿಗಿಬಂದೋಬಸ್ತ್. ಹಲವೆಡೆ ನಿಷೇದಾಜ್ಞೆ, ಎಲ್ಲೆಲ್ಲು ಖಾಕಿಗಳ ಕಾರೋಬಾರು. ಶಾಲಾ ಕಾಲೇಜುಗಳಿಗೆ ರಜೆ... ಇಷ್ಟೆಲ್ಲಾ ಆದಮೇಲೆ ಜನ ಹೇಗೆ ತಾನೆ ನೆಮ್ಮದಿಯಿಂದ ಇರಲು ಸಾಧ್ಯ ಹೇಳಿ? ಪರಿಹಾರವೇ ಕಾಣದ ಸಮಸ್ಯೆ ಇದು ಅಂದುಕೊಂಡವರಿಗೆ ಲಖನೌ ಹೈಕೋರ್ಟ್ ನ ತ್ರಿಸದಸ್ಯ ನ್ಯಾಯ ಪೀಠದ ತೀರ್ಪು ಎಲ್ಲಾ ನಿರೀಕ್ಷೆಗಳನ್ನು ಹುಸಿಮಾಡಿದೆ; ನಮ್ಮ ಸಂವಿಧಾನದ ಹುರುಳನ್ನು  ಎತ್ತಿಹಿಡಿದಿದೆ.
 
ತ್ರಿಸದಸ್ಯ  ನ್ಯಾಯಪೀಠ ವಿವಾದಿತ ೨.೭ (೮೭ ಗುಂಟೆ ) ಎಕರೆ ಪ್ರದೇಶವನ್ನು ರಾಮ ಜನ್ಮಭೂಮಿ ನಿರ್ಮಾಣ ಸಮಿತಿ, ಬಾಬ್ರಿ ಮಸೀದಿ ಕ್ರಿಯಾಸಮಿತಿ ಹಾಗು ನಿರ್ಮೋಹಿ ಅಖಾಡಕ್ಕೆ ಮೂರು ಪಾಲು ಮಾಡುವ ಮೂಲಕ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ರೂಪಿಸಿದೆ. ತಲಾ ೨೭ ಗುಂಟೆ ಭೂಮಿ ಈಗ ಈ ಮೂವರು ಅರ್ಜಿದಾರರಿಗೆ ಸಿಗಲಿದೆ. ನ್ಯಾಯಪೀಠ, ಬಾಬ್ರಿ ಮಸೀದಿ ಕಟ್ಟುವ ಮುನ್ನ ಅಲ್ಲಿ ದೇವಾಲಯವಿದ್ದ ಐತಿಹಾಸಿಕ ಕುರುಹುಗಳನ್ನು ಎತ್ತಿ ಹಿಡಿದಿದೆ. ಹಾಗೆಯೇ ಮಸೀದಿ ನಡೆದುಕೊಂಡು ಬಂದ ದಾಖಲೆಗಳನ್ನು ಪರಿಶೀಲಿಸಿದೆ. ಇದಲ್ಲದೆ ಸುನ್ನಿ ವಕ್ಫ್ ಬೋರ್ಡ್ ನ  ಹಾಗೂ ಮಸೀದಿಯ ಸುತ್ತ ಸ್ಮಶಾನ ಇತ್ತೆಂಬ ಅರ್ಜಿಯನ್ನು ವಜಾಮಾಡಲಾಗಿದೆ. ಮೂರು ತಿಂಗಳ ಕಾಲ ವಿವಾದವಿದ್ದ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಅತೃಪ್ತರು ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಬಹುದಾಗಿದೆ.
 
ಲಖ್ನೋ ನ್ಯಾಯಾಲಯದ ಈ ತೀರ್ಪು ಸದ್ಯದ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವೆನ್ನಬಹುದು. ನ್ಯಾಯಮೂರ್ತಿಗಳಾದ ಡಿ.ವಿ. ಶರ್ಮಾ, ಸುಧೀರ್ ಅಗರವಾಲ್ ಹಾಗು ಎಸ್. ಯು. ಖಾನ್ ಅವರ ಸುದೀರ್ಘ ವಿಚಾರಣೆ-ಆಲಿಕೆಯ ಒಟ್ಟಾರೆ ಶ್ರಮದ ಫಲ ಈ ತೀರ್ಪು. ನ್ಯಾಯಮೂರ್ತಿ ಡಿ.ವಿ. ಶರ್ಮಾ ಅವರಿಗಿದು ಮರೆಯಲಾಗದ ಐತಿಹಾಸಿಕ ತೀರ್ಪು. ಇದು ಅವರ ನ್ಯಾಯಾಧಿಪತ್ಯದಲ್ಲಿ ಬರಲಿರುವ ಕೊನೆಯ ತೀರ್ಪು! ಅಕ್ಟೋಬರ್ ೧ ದ ರಿಂದ ಅವರು ನಿವೃತ್ತ ನ್ಯಾಯಮೂರ್ತಿ!!
 
ರಾಜಕೀಯವಾಗಿ ಯಾರಿಗೆ ಲಾಭ?!
 
ಅಯೋಧ್ಯೆಯ ತೀರ್ಪು ರಾಜಕೀಯವಾಗಿ ಬಿಜೆಪಿಗೇ ಲಾಭದಾಯಕ ಎಂದು ಹೇಳಬಹುದು. ಅಯೋಧ್ಯೆಯ ರಾಮ ಜನ್ಮಭೂಮಿ ಪರವಾಗಿ ಹೋರಾಡಿದ ಬಿಜೆಪಿಗೆ, ಮಸೀದಿಯ ಸ್ಥಳದಲ್ಲಿ ದೇವಾಲಯ ಇತ್ತೆಂಬುದನ್ನು ನ್ಯಾಯಾಲಯ ಬೆಂಬಲಿಸಿರುವುದು ಕೋಡು ಬರಿಸುವುದರಲ್ಲಿ ಅನುಮಾನವಿಲ್ಲ. ಅಲ್ಲಿ ಇನ್ನು ರಾಮ ಜನ್ಮ ಭೂಮಿ ನಿರ್ಮಾಣಕ್ಕೆ ಬಿಜೆಪಿಯೊಂದಿಗೆ ಇಡೀ ಸಂಘ ಪರಿವಾರ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಇತರೆ ಹಿಂದೂ ಸಂಘಟನೆಗಳು ಮುಂದಾಗುವುದು ಖಚಿತ. ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾರ್ಯ ಇನ್ನು ಮೂರು ತಿಂಗಳಿನಲ್ಲಿ ಬಿರುಸಾಗಲಿರುವುದೂ ನಿಜ. ಹಾಗೇ ಈ ಸಂಘಗಳು ಮುಂದಿನ ಚುನಾವಣಾ ತಂತ್ರವಾಗಿ ಮಥುರೆಯ ಕೃಷ್ಣ ದೇಗುಲದ ವಿಚಾರಕ್ಕೆ ಹೆಚ್ಚಿನ ಒತ್ತುಕೊಡುವ ಎಲ್ಲಾ ಸಾದ್ಯತೆಗಳು ಇವೆ. ಈ ಮದ್ಯೆ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಹೈಕೋರ್ಟ್ ತೀರ್ಪಿನ ವಿರುದ್ದ ಸರ್ವೋಚ್ಹ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳುವ ಮೂಲಕ ವಿರೋಧ ವ್ಯಕ್ತಪಡಿಸಿದೆ. ಹೀಗಿರುವಾಗ ಕಾಂಗ್ರೆಸ್ಸ್ ಸೇರಿದಂತೆ ಉಳಿದ ’ಸೆಕ್ಯುಲರ್’ ಪಕ್ಷಗಳು ತಮ್ಮ ಚುನಾವಣಾ ತಂತ್ರಗಳಿಗೆ ಈ ತೀರ್ಪನ್ನು ಯಾವರೀತಿ ಅಳವಡಿಸಿಕೊಳ್ಳುತಾರೆ ಎಂಬುದನ್ನು ಕಾಡು ನೋಡಬೇಕಿದೆ .
 

 

ಪಾದಯಾತ್ರೆ ಪ್ರಹಸನ  

 
ಜಾನಕಿ ಮಂಜುನಾಥಪುರ
 
ಈ ಸೆಪ್ಟೆಂಬರ್ ೨೦೧೦ ಮೈಸೂರಿಗರಿಗೆ ವಿಶೇಷವೆ ಎನ್ನಬೇಕು.
 
ಇಬ್ಬರು ಸ್ವಾಮೀಜಿಗಳು: ಮಾಧ್ವ ಮತ್ತು ಮಾದಾರ, ದೊಡ್ಡ ಸುದ್ದಿಯನ್ನೇ ಎಬ್ಬಿಸಿದರು. ಮಾಧ್ವಾಯತಿ ವಿಶ್ವೇಶ್ವರ ತೀರ್ಥರು ಚತುರ್ಮಾಸದ ಆಚರಣೆಗಾಗಿ ಮೈಸೂರಿಗೆ ಬಂದಿದ್ದರು. ಈಗ ಅವರು ಬಂದ ಕಡೆ ಎಲ್ಲ ದೊಡ್ಡ ಸುದ್ದಿ ಮಾಡುತ್ತಾರೆ. ಮಾಧ್ಯಮದವರು ಕೂಡ ಅವರ ಸುದ್ದಿಗಾಗಿ ಕಾತರರಾಗಿರುತ್ತಾರೆ. ಶ್ರೀಗಳದು ಈಗ ಒಂದೇ ಮಾತು: ಹಿಂದೂಗಳೆಲ್ಲ ಒಂದಾಗಬೇಕು ಅಂತ.
ಯಾಕೆ ಶ್ರೀಗಳು ಇಷ್ಟು ಗಾಬರಿ ಬಿದ್ದಿದ್ದಾರೆ ಕಾರಣ ಏನಿರಬಹುದು? ಸಹಜವಾಗಿಯೆ ಒಬ್ಬ ಸಾಮಾನ್ಯ ಪ್ರಜೆಗೆ ಕೂಡ ಇದು ತುಂಬಾ ಕುತೂಹಲದ ಪ್ರಶ್ನೆಯಾಗಿ ಕಾಡುತ್ತದೆ. ಏನಿದು? ಹಿಂದೂಗಳು ಯಾರು? ಎಲ್ಲಿದ್ದಾರೆ, ಹೇಗಿದ್ದಾರೆ? ಅವರಿಗೆ ಏನಾಗಿದೆ? ಅವರೇನು ಬಾವಿಗೆ ಹಾರುತ್ತಿದ್ದಾರೆಯೆ, ಬೆಂಕಿಗೆ ಬೀಳುತ್ತಿದ್ದಾರೆಯೇ?

ಛೆ!! ಇವೆಲ್ಲ ಪ್ರಜ್ಞಾವಂತರ ಆತಂಕಗಳು. ಜನಸಾಮಾನ್ಯರು ಮಾತ್ರ ಅದೇ ಬದುಕು, ಅದೇ ನರಕ, ಅದೇ ಬಚ್ಚಲು ಹುಳುಗಳಂತೆ ಕಾಲ ಹಾಕುತ್ತಿದ್ದಾರೆ. ಪ್ರಭುತ್ವ ಹೋಗಿ ಪ್ರಜಾರಾಜ್ಯ ಬಂದಿದೆ. ಎಂದರೆ ರಾಜಕಾರಣಿಗಳೆಂಬ ಹೊಸ ಪುಂಡರು, ಗಂಡರು ಅಮರಿಕೊಂಡಿದ್ದಾರೆ. ಅವರಿಗೆ ಹಿಂದೂ-ಮುಂದೂ ಏನೂ ಕಾಣುತ್ತಿಲ್ಲ; ಒಂದೊತ್ತಿನ ಕೂಳು, ಒಂದು ಮಗ್ಗುಲ ನಿದ್ರೆ ಮಾತ್ರ.
ಹಿಂದೂತ್ವ ಎನ್ನುವುದು ಇವನ್ನೆಲ್ಲ ನಿವಾರಿಸಬಹುದೇ? ಧರ್ಮದ ವಿಷಯದಲ್ಲಿ ಹೀಗೆ ಉಪಯೋಗದ ದೃಷ್ಟಿಯಿಂದ ನೋಡಬಾರದು ಎನ್ನುವವರಿದ್ದಾರೆ. ಧರ್ಮಕೂಡ ಒಂದು ರಾಜಕೀಯವೆ. ಆದರಿಂದಲೇ ಅದನ್ನು ಧರ್ಮಕಾರಣ ಎನ್ನುತ್ತಾರೆ. ರಾಜಕೀಯದಲ್ಲಿ ನೈತಿಕತೆಯ ಪ್ರಮಾಣ ಕಡಿಮೆ, ಧರ್ಮ ಯಾಹೊತ್ತೂ ನೈತಿಕತೆಯನ್ನು ಮುಂದೆ ಮಾಡುತ್ತದೆ. ಆ ಕಾರಣಕ್ಕಾಗಿಯೆ ಜನ ರಾಜಕಾರಣವನ್ನು ಮರೆತೂ ಸುಖವಾಗಿರಬಹುದು, ಧರ್ಮಕಾರಣ ಹಾಗಲ್ಲ; ಜೀವನಕ್ಕೆ ನೆಲ-ಬೆಲೆ ತಂದು ಕೊಟ್ಟು ಅದನ್ನು ಜೀವನ ಮಾಡುತ್ತದೆ.
 
 
 
 

ಕಾವೇರಿ ಕಥನ ೫: ಕಾವೇರಿ ನದಿ ನೀರಿನ ವಿಚಾರಣೆ-ವಕಾಲತ್ತು 

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
 
ಕಾವೇರಿ ನದಿಯಲ್ಲಿ ಕರ್ನಾಟಕದ ಕೊಡಗಿನಿಂದ ತಮಿಳುನಾಡಿನ ಕೊಲೆರೂನ್ ಅಣೆಕಟ್ಟೆಯವರೆಗೂ ಹರಿಯುವ ನೀರಿನ ಪ್ರಮಾಣ ೭೯೦ ಟಿ.ಎಮ್.ಸಿಗಳೆಂದು ಹೇಳಲಾಗಿದೆ. ಅಂದರೆ ೪೨೫ ಟಿ.ಎಮ್.ಸಿ.ಗಳಷ್ಟು ನೀರು ಕರ್ನಾಟಕದ ಭಾಗದಿಂದ ಕಾವೇರಿ ನದಿಗೆ ಹರಿಯುತ್ತದೆ. ತಮಿಳುನಾಡಿನ ಭಾಗದಿಂದ ಹರಿದು ಬರುವ ನೀರಿನ ಪ್ರಮಾಣ ೨೫೨ ಟಿ.ಎಮ್.ಸಿ.ಗಳು. ಅಂತೆಯೇ ಕೇರಳ ರಾಜ್ಯದಿಂದಲೂ ೧೧೩ ಟಿ.ಎಮ್.ಸಿ.ಯಷ್ಟು ನೀರು ಕಾವೇರಿ ನದಿಯನ್ನು ಸೇರುತ್ತದೆ. ಇದು ಕೇಂದ್ರ ಸರ್ಕಾರದ ನೇತ್ರತ್ವದ ನೀರಾವರಿ ಇಲಾಖೆಯ ಅಧಿಕಾರಿಗಳು ಅಧ್ಯಯನ ಮಾಡಿ ನೀಡಿರುವಂತಹ ಅಧಿಕೃತವಾದ ಅಂಕಿ ಅಂಶ. ಅಂದರೆ ಕಾವೇರಿ ನದಿಯಲ್ಲಿ ಶೇಖರವಾಗುವ ಒಟ್ಟು ನೀರಿನ ಪ್ರಮಾಣದಲ್ಲಿ ಶೇ. ೫೩.೮ ರಷ್ಟು ನೀರು ಕರ್ನಾಟಕದ್ದಾಗಿದೆ; ತಮಿಳುನಾಡಿನಿಂದ ಹರಿದು ಬರುವ ನೀರಿನ ಪ್ರಮಾಣ ಶೇ. ೩೧.೯ ರಷ್ಟು ಮಾತ್ರವೇ. ಆದರೂ ಎರಡೂ ರಾಜ್ಯಗಳ ಒಟ್ಟಾರೆ ನೀರಾವರಿ ಯೋಜನೆಗಳಲ್ಲಿ ತಮಿಳುನಾಡು ಬಳಸಿಕೊಳ್ಳುತ್ತಿರುವ ನೀರಿನ ಪ್ರಮಾಣ ಶೇಕಡಾ ೮೦ ರಷ್ಟಾದರೆ ಕರ್ನಾಟಕ ಬಳಸಿಕೊಂಡದ್ದು ಶೇ. ೨೦ ರಷ್ಟು ಮಾತ್ರ.
 
 
 

 ಯಡಿಯೂರಪ್ಪನವರ ಪೊಲಿಟಿಕಲ್ ಕುಂಟಬಿಲ್ಲೆ: ನಾಲ್ಕೆಜ್ಜೆ ಮುಂದೆ ಆರ್ಹೆಜ್ಜೆ ಹಿಂದೆ

 
ಮುಖ್ಯಮಂತ್ರಿ ಯಡಿಯೂರಪ್ಪ ಈ ಕಡೆ ಒಂದು ಸಮಾಧಾನದ ಉಸಿರು ಬಿಟ್ರೆ ಆ ಕಡೆ ಎಂಟು ಹಾರ್ಟ್ ಬೀಟ್ ಹೆಚ್ಚಾಗುವವಾಗೆ ಮುಗ್ಗರಿಸ್ತಾ ನಡಿತಿದಾರೆ. ಈ ಕಡೆ ಕಳೆದ ಆರೇಳು ತಿಂಗಳಿಂದ ಸಂಪುಟ ವಿಸ್ತರಣೆಗಾಗಿ ಮಾಡಿದ ಅವರ ಕಸರತ್ತು ಈಗ ಫಲ ಕೊಟ್ಟಿದೆ! ಅದರಲ್ಲೂ ಶೋಭಾ ಕರಂದ್ಲಾಜೆ ಹಾಗು ಸೋಮಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಅವ್ರ ಕನಸು ನನಸಾಗಿರೋದಕ್ಕೆ ಯಡಿಯೂರಪ್ಪ ಅವರ ಮುಖದಲ್ಲಿ ರಾಜಕಳೆ.
 
ರಾಜಕೀಯವಾಗಿ ವಿರೋದಿಗಳನ್ನ ಹೇಗೆ ಬಗ್ಗು ಬಡಿಯಬೇಕು ಎಂಬ ಒಳಮರ್ಮವನ್ನು ಯಡಿಯೂರಪ್ಪನವರು ಚೆನ್ನಾಗಿ ಉಪಯೋಗಿಸಿ ಕೊಂಡಿದ್ದಾರೆ. ಸಚಿವ ರಾಮಚಂದ್ರೇಗೌಡರ ರಾಜಿನಾಮೆ ಇದಕ್ಕೆ ಸಾಕ್ಷಿ! ಮೆಡಿಕಲ್ ಎಜುಕೇಶನ್ ಮಿನಿಸ್ಟರ್ ಆಗಿ ರಾಮಚಂದ್ರೇಗೌಡ ಅವರ ಸಚಿವಾಲಯ ನಡೆಸಿರೋ ಅವ್ಯವಹಾರ ತಲೆ ತಗ್ಗಿಸುವಂತದ್ದು! ಮತ್ತೊಬ್ಬರ ಬದುಕಿನಲ್ಲಿ ಆಟ ಆಡುವಾಗ ಸ್ವಲ್ಪನಾದ್ರು ಮರ್ಯಾದೆ ಉಳಿಸಿಕೊಳ್ಳಬೇಕು. ನೇಮಕಾತಿಗಳಲ್ಲಿ ಹಣ ಸಿಗುತ್ತೆ ಅಂತ ಮನಸ್ಸಿಗೆ ಬಂದ ಹಾಗೆ ಮಾಡಿದ್ರೆ ಅದನ್ನ ಸರ್ಕಾರ ಅಂತ ಹೇಳೋ ಬದಲು ಬೇರೇನೋ ಹೇಳಬೇಕಾಗುತ್ತೆ! ೩೫೦ಕ್ಕೊ ಹೆಚ್ಚು ಸಿಬ್ಬಂದಿಯನ್ನ ನೇಮಕ ಮಾಡಿಕೊಳ್ಳುವಾಗ ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯದೇ ತರಾತುರಿಯಲ್ಲಿ ಓಕೆ ಮಾಡಿ, ಆನಂತರ ಆಯ್ಕೆಯಾದ ಅಭ್ಯರ್ಥಿಗಳನ್ನ ವಜಾಮಾಡಿದರೆ ಇದಕ್ಕೆ ಏನೆನ್ನಬೇಕು? ಸ್ವತಹ ಮುಖ್ಯಮಂತ್ರಿಗಳೇ ಸಂಪುಟ ಸಭೆಯಲ್ಲಿ ಸಹಿ ಹಾಕಿ ಕೈಕೈ ಹಿಸುಕಿಕೊಳ್ಳುವ ಸ್ಥಿತಿಗೆ ಬಂದರೆ ಯಾರು ಹೊಣೆ? ರಾಮಚಂದ್ರೇಗೌಡ ಮೆಡಿಕಲ್ ಎಜುಕೇಶನ್ ಸಚಿವರಾಗಿ ಇದಕ್ಕೆ ಹೊಣೆಗಾರರು ಎಂಬುದು ನಿಜ. ಅವರ ರಾಜಿನಾಮೆ ಪಡೆದ ಸಿಎಂ ಅವರ ನಿರ್ಧಾರ ಕೂಡ ಸರಿ. ಆದರೆ ಈ ಸರ್ಕಾರ ರಚನೆಯಾದ ದಿನದಿಂದಲೂ ಭಯಂಕರ ಅವ್ಯವಹಾರದಲ್ಲಿ ತೊಡಗಿರುವ ಬಹಳಷ್ಟು ಸಚಿವರ ಬಗ್ಗೆ ಇದೇ ಸಿಎಂ ಮೌನ ವಹಿಸುವುದು ಮಾತ್ರ ಯಾಕೆ ಎಂಬುದು ಪ್ರಶ್ನೆ.
 
ರಾಮಚಂದ್ರೇಗೌಡ ಅವ್ರ ಇಲಾಖೆಯಲ್ಲಿ ನಡೆದ ಅವ್ಯವಹಾರವನ್ನ ಸಿಎಂ ಸೀರಿಯಸ್ ಆಗಿ ತೆಗೆದುಕೊಂಡಿದ್ದನ್ನು ನೋಡಿದರೆ ಬಹುಶ ಇನ್ನು ಸಿಎಂ ಭ್ರಷ್ಟ ಸಚಿವರುಗಳ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬಂತಿತ್ತು. ಹಾಗೆ ನೋಡಿದರೆ ಗಣಿ ಧಣಿ ಗಳ ಲೂಟಿ ಮುಂದೆ ಈ ಪ್ರಕರಣ ಸ್ವಲ್ಪ ಕಡಿಮೆ ಧಾಳಾಧೂಳಿಯದ್ದೇ. ಆದರೆ ಇದೊಂದು ಪೂರ್ವ ನಿಯೋಜಿತ ಸಂಚು! ರಾಮಚಂದ್ರೇಗೌಡ ಸಂಪುಟದಿಂದ ಹೊರಗಿರಬೇಕು ಎಂಬ ನಿರ್ಧಾರವನ್ನು ಬೆಳಗಾಂನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ವೇಳೆಗೆ ಸಿಎಂ ನಿರ್ಧರಿಸಿಬಿಟ್ಟಿದ್ದರು. ಅದಕ್ಕಾಗಿ ತಮ್ಮ ಸಹೋದ್ಯೋಗಿಗಳಲ್ಲಿ ರಾಮಚಂದ್ರೇಗೌಡರ ರಾಜೀನಾಮೆ ನಂತರ ವಕ್ಕಲಿಗರಲ್ಲಿ ಯಾರಿಗಾದರು ಒಬ್ಬರಿಗೆ ಸಚಿವ ಸ್ಥಾನ ನೀಡುವ ಐಡಿಯ ಮಾಡಿದ್ದರಂತೆ. ಯಡಿಯೂರಪ್ಪನವರ ಸದರಿ ಸಚಿವ ಸಂಪುಟದಲ್ಲಿ ಈಗಾಗಲೇ ಬಹಳಷ್ಟು ಭ್ರಷ್ಟಾತಿಭ್ರಷ್ಟ ತಿಮಿಂಗಲಗಳು ಇವೆ. ಯಡಿಯೂರಪ್ಪ ಅವರ್ಯಾರನ್ನು ಮುಟ್ಟಲು ರೆಡಿ ಇಲ್ಲ. ತನಗೆ ತಿರುಗಿ ಬೀಳದವರನ್ನು ತಮ್ಮ ದಾಳಕ್ಕೆ ಬಲಿಪಶು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.
 
ಮುಖ್ಯಮಂತ್ರಿಗಳು ತಮ್ಮನ್ನೂ ಸೇರಿದಂತೆ ೩೪ ಮಂದಿ ಸಂಪುಟ ಸದಸ್ಯರಲ್ಲಿ ಲಿಂಗಾಯಿತರಿಗೆ ಸಿಂಹ ಪಾಲು ನೀಡುವ ಮೂಲಕ ತಮ್ಮ ಬಾಂಧವರನ್ನು ತಮ್ಮ ಕಡೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಅಲ್ಲದೇ ಸಂಪುಟದಲ್ಲಿ ೪ ಮಂದಿ ಬ್ರಾಹ್ಮಣರಿಗೆ ಅವಕಾಶ ಮಾಡಿಕೊಡುವ ಮೂಲಕ ಸಂಘ ಪರಿವಾರದ ಪ್ರೀತಿಗೂ ಕಾರಣರಾಗಿದ್ದಾರೆ. ಇನ್ನು ಎರಡನೇ ಅತಿಹೆಚ್ಚು ಜನಸಂಖ್ಯೆಯ ಜನಾಂಗವಾದ ವಕ್ಕಲಿಗರಲ್ಲಿ ಮೂವರಿಗೆ, ಮೂರನೇ ಅತಿಹೆಚ್ಚುಜನ ಸಂಖ್ಯೆಯ ಜನಾಂಗವಾದ ಕುರುಬರಲ್ಲಿ ಒಬ್ಬರಿಗೆ ಸಚಿವಸ್ಥಾನ ನೀಡಿ ಯಾವ ಅಪಸ್ವರವು ಇಲ್ಲದಂತೆ ಮಾಡಿಕೊಂಡಿದ್ದಾರೆ. ಇದು ಮುಖ್ಯಮಂತ್ರಿಗಳ ಜಾಣತನ! ಸಚಿವ ಸಂಪುಟಕ್ಕೆ ಸೇರಿಸಿಕೊಂಡ ಆರು ಮಂದಿಯ ಪೈಕಿ ಸೋಮಣ್ಣ, ಶೋಭಾ ಕರಂದ್ಲಾಜೆಯವರಿಗೆ ಸ್ವತಹ ಯಡಿಯೂರಪ್ಪನವರೇ ಪಟ್ಟು ಹಿಡಿದು ಅವಕಾಶ ಕೊಡಿಸಿದ್ದಾರೆನುವುದು ಎಲ್ರಿಗೂ ಗೊತ್ತು.
 
ಆರೇಳು ತಿಂಗಳ ಹಿಂದೆ ಕಣ್ಣೀರು ಹಾಕಿದ್ದ ಯಡಿಯೂರಪ್ಪ ಈಗ ಮುಂದಿನ ಚುನಾವಣೆಗಳ ದೃಷ್ಟಿಯಿಂದ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಎಲ್ಲ ಜಾಣತನಗಳನ್ನೂ ಮಾಡುತ್ತಿದ್ದಾರೆ. ಅವರೀಗ ಸಂಪೂರ್ಣ ಅವಲಂಬಿಸಿರೋದು ತಮ್ಮ ಲಿಂಗಾಯಿತ ಸಮುದಾಯವನ್ನ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ತಮ್ಮನ್ನು ತಾವು ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕನನ್ನಾಗಿ ರೂಪಿಸಿಕೊಳ್ಳುವಲ್ಲಿ  ಹೆಜ್ಜೆ ಇಡುತ್ತಿರುವುದು ಅವರ ರಾಜಕೀಯ ತಿರ್ಮಾನಗಳಿಂದಲೇ ತಿಳಿಯುತ್ತದೆ. ಇದು ಯಡಿಯೂರಪ್ಪ ಅವರನ್ನ ಬಹುಸಂಖ್ಯಾತ ಸಮುದಾಯದ ನಾಯಕನನ್ನಾಗಿ ಪ್ರೊಜೆಕ್ಟ್ ಮಾಡುವುದಂತೂ ನಿಜ. ಈಗ ಯಡಿಯೂರಪ್ಪ ಅವರನ್ನು ಅಟ ಆಡಿಸಲು ಬಿಜೆಪಿ ಹೈಕಮಾಂಡ್ ಗೂ ಸುಲಭ ಆಗ್ತಿಲ್ಲ. ಇದೆಲ್ಲಾ ಯಡಿಯೂರಪ್ಪನವರ ಒಳ್ಳೆ ಸುದ್ದಿಗಳ ಪಾಲಿಗೆ ಸೇರುತ್ವೆ.
 
ಭೂ ವಿವಾದ ಯಡ್ಡಿ -ನಾಯ್ಡು ಕುಟುಂಬ
 
ಹೀಗೆ ಎಲ್ಲಾ ಸರಾಗವಾಗಿ ನಡೆಯುತ್ತಿದೆ ಎನ್ನುವಾಗಲೇ ವಸತಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಹಾಗು ಆತನ ಪುತ್ರ ಕಟ್ಟಾ ಜಗದೀಶ್ ಭೂ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ! ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ, ಸರ್ಕಾರಕ್ಕೆ ಸೇರಿದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮಗನ ಹೆಸರಿನಲ್ಲಿ ಕೊಂಡುಕೊಳ್ಳುವ ಮೂಲಕ ಕಟ್ಟಾ ಸುಬ್ರಮಣ್ಯನಾಯ್ಡು ಅವ್ಯವಹಾರ ನಡೆಸಿದ್ದ ಪ್ರಕರಣ ಲೋಕಾಯುಕ್ತರ ತನಿಖೆ ಮೂಲಕ ಬಯಲಾಗಿದೆ. ಸ್ವತಃ ಕಟ್ಟಾ ಸುಬ್ರಮಣ್ಯನಾಯ್ಡು ಲೋಕಾಯುಕ್ತರ ಬಳಿ ತೆರಳಿ ನನಗೆ ನಕಲಿ ದಾಖಲೆ ಸೃಷ್ಟಿಸಿ ಮಾರಲಾಗಿರುವ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಸುಳ್ಳುಸುಳ್ಳೆ ಗೋಳಾಡಿಕೊಂಡಿರುವುದು ಈಗ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ನಕಲಿ ಕಾಗದ ಪತ್ರದ ಸಹಾಯದಿಂದ ಖರೀದಿ ಮಾಡಿರುವುದೇ ಅಲ್ಲದೆ, ಕರ್ನಾಟಕ ಕೈಗಾರಿಕಾ ಅಭಿವೃದ್ದಿ ಮಂಡಳಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ಪರಿಹಾರದ ವಿಷಯದಲ್ಲಿಯೂ ಕಟ್ಟಾ ಸುಬ್ರಮಣ್ಯನಾಯ್ಡು ಮತ್ತವರ ಮಗ ಅವ್ಯವಹಾರ ನಡೆಸಿರುವುದು ಬಯಲಿಗೆ ಬಂದಿದೆ. ಸಾವಿರಾರು ಕೋಟಿಗಳ ಅವ್ಯವಹಾರ ಇದಾಗಿದ್ದು ಬಹುಪಾಲು ಕಟ್ಟಾ ಸುಬ್ರಮಣ್ಯನಾಯ್ಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ಅನಿವಾರ್ಯವಾಗಲಿದೆ .
 
ಹೀಗಿರುವಾಗಲೇ ಸ್ವತಃ ಮುಖ್ಯಮಂತ್ರಿ ಗಳ ಪುತ್ರ ಬಿಡಿಎ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಯನ್ನು ಡಿ-ನೋಟಿಫೈ ಮಾಡಿಸಿ ತನ್ನ ಹೆಸರಿಗೆ ಮಾಡಿಸಿಕೊಂಡು ಸಿಕ್ಕಿ ಬಿದ್ದಿರುವುದೂ ಹೊರಬಂದಿರುವುದು ರಾಜ್ಯ ರಾಜಕೀಯದಲ್ಲಿ ಚುರುಕು ಹುಟ್ಟಿಸಿದೆ. ಭಾರಿ ಭೂ ಅವ್ಯವಹಾರ ಇದಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಈ ಬಗ್ಗೆ ಕಸಿವಿಸಿಗೊಂಡಿದ್ದಾರೆ. ಮುಂದಿನ ದಿನ ಗಳಲ್ಲಿ ನನ್ನ ವಿರುದ್ದ ಕ್ರಾಂತಿಯೇ ನಡೆಯಲಿದೆ ಎಂಬ ಸೂಚನೆ ನೀಡುವ ಮೂಲಕ ವಿರೋಧ ಪಕ್ಷಗಳ ಧಾಳಿಗೆ ಎದಿರೇಟು ನೀಡಲು ಸಜ್ಜಾಗಿದ್ದಾರೆ. ಮುಖ್ಯಮಂತ್ರಿಗಳು ಈಗ ಯಾವ ಹೆಜ್ಜೆ ಇಡುತ್ತಾರೆ ಅನ್ನೋದು ರಾಜಕಿಯವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಒಂದು ಕಡೆ ಪಕ್ಷದಲ್ಲಿ ಬಲಗೊಳ್ಳುತ್ತಿರುವಾಗಲೇ ಕೆಟ್ಟ ಹಗರಣಗಳು ಸುತ್ತಿಕೊಳ್ಳುತ್ತಿರುವುದು ನೋಡಿದರೆ ಯಡಿಯೂರಪ್ಪ ನಾಲ್ಕೆಜ್ಜೆ ಮುಂದೆ ಹೋಗಿ ಆರ್ಹೆಜ್ಜೆ ಹಿಂದೆ ಬರುತ್ತಾ ರಾಜಕೀಯ ಕುಂಟಾಬಿಲ್ಲೆ ಆಡುತ್ತಿದ್ದಾರೆ.